Friday, October 12, 2018

ಅಂದು ಜೋಸೆಫನು ಜತೆಗಿದ್ದ
ಕುಚುಕು ಕರೀಮನು ಕಣ್ಣುಗಳಾಗಿದ್ದ
ಹರಿಜನರ ಹರೀಶನು ಉಸಿರಾಗಿದ್ದ
ಭಟ್ಟರ ಮಗನೂ ನಮ್ಮೊಂದಿಗೆ ಬೆರೆತಿದ್ದ
ನಾವು ಏರದ ಮರಗಳಿಲ್ಲ
ಆಡದ ಆಟಗಳಿಲ್ಲ
ಮಾವು ಕದ್ದು ತಿನ್ನಲು ನುಗ್ಗದ ತೋಟಗಳಿಲ್ಲ
ಶಾಲೆಯಲ್ಲಿ ಶಿಕ್ಷೆ ಅನುಭವಿಸಿದ ದಿನಗಳೇ ಇಲ್ಲ..!
ಕರೀಮನ ಮನೆಯ ಬಿರಿಯಾನಿ ಸವಿಯದ ದಿನವಿಲ್ಲ
ಜೋಸೆಫನ ಹಬ್ಬಕ್ಕೆ ಹಾಜರು ನಾವೆಲ್ಲ
ಭಟ್ಟರ ಮನೆಯ ಪಾನಕ ಸವಿ ಬೆಲ್ಲ
ಇರುತಿದ್ದೆವು ಹರೀಶನ ಮನೆಯಲ್ಲಿ ಕರೆದಾಗಲೆಲ್ಲ
ಅಂದು ನಮ್ಮ ಎಳೆಯ ವಯಸ್ಸು
ಪರಿಶುದ್ದವಾಗಿತ್ತು ಎಲ್ಲರ ಮನಸ್ಸು
ಕಾಣುತಿದ್ದೆವು ಹಲವು ಕನಸು
ಒಟ್ಟಾಗಿ ಸಾಧಿಸಲು ಯಶಸ್ಸು..!
ಕಾಲ ಕಳೆದು ಹೋಯಿತು
ಸಮಾಜದ ಹಲವು ಮುಖಗಳ ಪರಿಚಯವಾಯಿತು
ಪಕ್ಷ ಪಂಥಗಳು ಬೇರೂರಿತು
ಲಗಾಮಿಲ್ಲದ ಕುದುರೆಯಂತೆ ಮನಸ್ಸು ಅಲೆದಾಡಿತು
ಧರ್ಮದ ಅಮಲು ತಲೆಗೇರಿತು
ಗಾಳಿ ಸುದ್ದಿಗಳು ಕಿವಿಗಪ್ಪಳಿಸಿತು
ದ್ವೇಷದ ಗಾಳಿ ಮನವ ಆವರಿಸಿತು
ಜಾತಿ ಧರ್ಮದ ಮುಂದೆ ಪ್ರೀತಿ ಸೋತಿತು
ತಲೆಯ ಮೇಲಿನ ಟೋಪಿ
ಹಣೆಯ ವಿಭೂತಿ
ಸ್ನೇಹಕ್ಕೆ ತಂದಿಟ್ಟಿತು ಅಧೋಗತಿ..!
ಬಿಸಿ ರಕ್ತದ ಅಮಲಿನಲ್ಲಿ
ಹಲವರು ಸೇರಿ ನಿರ್ಮಿಸಿದ ಕಂದಕದಲ್ಲಿ
ಕೇವಲವಾಯಿತು ನಮ್ಮ ಸ್ನೇಹ ಕೆಲವೇ ದಿನಗಳಲ್ಲಿ
ಪ್ರೀತಿ ಕಂಗಳು ಕುರುಡಾಗಿತ್ತು ದ್ವೇಷದಲ್ಲಿ
ಬದುಕಿನ ಇಳಿ ಸಂಜೆ ಎದುರಾಯಿತು
ದೇಹದ ಶಕ್ತಿ ನಶಿಸಿತ್ತು
ಧರ್ಮದ ಅಮಲು ಇಳಿದಿತ್ತು
ಭುವಿಗೆ ಬೀಳ್ಗೊಡಲು ಕರೆ ಬಂದಿತ್ತು
ಆರು ಅಡಿ ಗುಂಡಿ ತಯಾರಾಗಿತ್ತು
ಹಿಂದಿರುಗಿ ನೋಡಿದೆ ನಾ ಬಂದ ದಾರಿ ಹೇಗಿತ್ತು..
ನನ್ನ ತಲೆಮಾರಿಗೆ ನಾ ನೀಡಿದ ಬಳುವಳಿ ಏನಿತ್ತು ..?
ದ್ವೇಷವೊಂದೆ ಅಲ್ಲಿ ಹೆಡೆ ಎತ್ತಿ ನಿಂತಿತ್ತು...!
 ರಾಜೇಶ್

No comments:

Post a Comment