ದಶಕಗಳ ಆಚೆಗೆ ಈ ದೇಶದಲ್ಲಿ ಕಾಂಗ್ರೆಸ್ ಬಿಟ್ಟರೆ ಬೇರೆ ಯಾವ ಪಕ್ಷವೂ ಸ್ವತಂತ್ರವಾಗಿ ಅಧಿಕಾರ ನಡೆಸಲು ಸಾಧ್ಯವೇ ಇಲ್ಲ ಎಂಬ ರಾಜಕೀಯ ಪರಿಸ್ಥಿತಿಯೊಂದಿತ್ತು. ಅದು ನೆಹರೂ ಹಾಗೂ ಇಂದಿರಾ ಕಾಲದಿಂದಲೂ ನಡೆದು ಬಂದದ್ದಾಗಿತ್ತು. ಈ ದೇಶದ ಜನರಿಗೆ ಕೈ ಒಂದೇ ಸರ್ವಸ್ವವಾಗಿತ್ತು. ಕಾಂಗ್ರೆಸ್ ಎಂದರೆ ಸ್ವಾತಂತ್ರಕ್ಕಾಗಿ ಹೋರಾಡಿ ದೇಶಕ್ಕೆ ಸ್ವತಂತ್ರ ತಂದು ಕೊಟ್ಟ ಪಕ್ಷ , ಕಾಂಗ್ರೆಸ್ ಎಂದರೆ ನಮಗೆ ಸೂರು ಕಟ್ಟಿ ಕೊಂಡು ಸ್ಥಿರವಾಗಿ ನೆಲೆ ನಿಲ್ಲಲು ನೆರವಾದ ಪಕ್ಷ ಎಂಬ ಭಾವ ಹಿರಿ ಜೀವಗಳಲ್ಲಿ ಮನೆ ಮಾಡಿತ್ತು . ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಬಿಟ್ಟರೆ ಬೇರೆ ಅನ್ಯ ಆಯ್ಕೆಯೇ ಇಲ್ಲ ಎಂದು ಜನ ಮತ್ತೆ ಮತ್ತೆ ಕಾಂಗ್ರೆಸ್ ಅನ್ನೇ ದೇಶ ಆಳಲು ಆಯ್ಕೆ ಮಾಡುತಿದ್ದರು. ಆಯ್ಕೆ ಮಾಡಿದ ಜನರ ಭಾವನೆಗಳಿಗೆ ಕಾಂಗ್ರೆಸ್ ಪಕ್ಷವು ದಶಕಗಳಲ್ಲಿ ನ್ಯಾಯ ಒದಗಿಸಿತೇ ಎನ್ನೋದು ಯಕ್ಷ ಪ್ರಶ್ನೆ.
ಸ್ವಾತಂತ್ರ ಬಂದ ನಂತರ ಈ ದೇಶವನ್ನು ಹೆಚ್ಚು ಕಾಲ ಆಳಿದ ಸರ್ಕಾರವೆಂದರೆ ಅದು ಕಾಂಗ್ರೆಸ್ ನೇತೃತ್ವದ ಯು ಪಿ ಎ ಸರಕಾರ . ಆದರೆ ಅದೇ ಕಾಂಗ್ರೆಸ್ ಇಂದು ತನ್ನ ಒಡನಾಡಿಗಳೊಂದಿಗೆ ಭಾರತದ ರಾಜ್ಯಗಳಲ್ಲಿ ಸ್ಥಿರ ನೆಲೆ ಕಂಡುಗೊಳ್ಳಲು ಹೆಣಗಾಡುತ್ತಿರುವುದು ವಿಪರ್ಯಾಸ. ಇದು ಕಾಂಗ್ರೆಸ್ ದಶಕಗಳ ಕಾಲ ನಡೆಸಿದ ದುರಾಡಳಿತ ಮತ್ತು ಪ್ರತಿ ಪಕ್ಷದ ಸಮರ್ಥ ನಾಯಕನೊಬ್ಬನನ್ನು ಎದುರಿಸಲು ಅನ್ಯ ನಾಯಕನೊಬ್ಬನನ್ನು ಬೆಳೆಯಲು ಬಿಡದೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದುದರ ಫಲ . ಕಳೆದ ಒಂದು ದಶಕದಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿ ಆಡಳಿತ ನಡೆಸಿದ ಕಾಂಗ್ರೆಸ್ ಅಧಿ ನಾಯಕಿ ಸೋನಿಯಾ ಗಾಂಧಿಯವರು ಇಂದು ಗುಜಾರಾತ್ ನಲ್ಲಿ ತನ್ನ ಆಪ್ತನನ್ನು ಗೆಲ್ಲಿಸಿಕೊಡಲು ಪಟ್ಟ ಹರಸಾಹಸವನ್ನು ನಾವು ಕಂಡಿದ್ದೇವೆ. ಗೆಲ್ಲಲು ಸಾಕಷ್ಟು ಸಂಖ್ಯಾ ಬಲವಿದ್ದರೂ ತನ್ನದೇ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದೆ ರೆಸಾರ್ಟ್ ವಾಸ್ತವ್ಯದ ಮೂಲಕ ಕಡೆಗೂ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಅದನ್ನೇ ಜಯಭೇರಿ ಎಂದು ಭಾವಿಸಿ ಹಿರಿ ಹಿರಿ ಹಿಗ್ಗುವುದನ್ನು ನೋಡುತಿದ್ದರೆ ಕಾಂಗ್ರೆಸ್ ಪಕ್ಷವು ಶೀಘ್ರವಾಗಿ ಇತಿಹಾಸದ ಪುಟಗಳಲ್ಲಿ ಕಾಣಲ್ಪಡುವುದರಲ್ಲಿ ಸಂಶಯವಿಲ್ಲ . ಇಂತಹದೊಂದು ಪಕ್ಷ ಹೀಗೆ ಇತ್ತು , ಇವರು ಮುನ್ನಡೆಸಿದರು , ಇಂತಹ ಕಾರಣಗಳಿಂದ ದೇಶದಲ್ಲಿ ಹೇಗೆ ನಿರ್ನಾಮವಾಯಿತು ಎಂಬುದನ್ನು ಇತಿಹಾಸಗಳಿಂದ ತಿಳಿಯಲ್ಪಡುವ ಸಂಧರ್ಭ ಬರಬಹುದು .
ದಶಕಗಳ ಕಾಲ ಹಗರಣಗಳಲ್ಲೇ ಮಿಂದೆದ್ದ ಕಾಂಗ್ರೆಸ್ ೨೦೧೪ ಕ್ಕೆ ಹೇಗೆ ಪ್ರತಿ ಪಕ್ಷ ಸ್ಥಾನವನ್ನೂ ಪಡೆದುಕೊಳ್ಳಲೂ ಅನರ್ಹವಾಯಿತೋ ಅದಕ್ಕಿಂತ ದುಸ್ಥಿತಿ ೨೦೧೯ರಲ್ಲಿ ಬರಬಹುದು . ಆ ಮುಜುಗರವನ್ನು ತಪ್ಪಿಸಲು ಕಾಂಗ್ರೆಸ್ ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿದೆ . ಪ್ರಧಾನಿ ಮೋದಿಯವರನ್ನು ಎದುರಿಸಲು ಸಮರ್ಥ ನಾಯಕರಿಲ್ಲ, ಕಾಂಗ್ರೆಸ್ ಪಕ್ಷದ ಆಸ್ತಿತ್ವದ ಪ್ರಶ್ನೆ ಎದುರಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರಾದ ಜೈ ರಾಮ್ ರಮೇಶ್ ಅವರು ಹಾಗೂ ಮಣಿಶಂಕರ್ ಅಯ್ಯರ್ ಅವರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸ್ವಂತ ಬಲದಲ್ಲಿ ಇನ್ನೆಂದೂ ಈ ದೇಶದಲ್ಲಿ ಅಧಿಕಾರ ಹಿಡಿಯುವುದು ಕನಸು ಎಂದು ಅರಿವಾದಾಗ ಅದು ಜಾತ್ಯಾತೀತ ಮುಖವಾಡ ಹೊಂದಿರುವ ಪ್ರಾದೇಶಿಕ ಪಕ್ಷಗಳೊಂದಿಗೆ ಸಖ್ಯ ಬೆಳೆಸಿ ಬಿ ಜೆ ಪಿ ಯನ್ನು ಎದುರಿಸಲು ಸಿದ್ಧಗೊಂಡಿರುವುದು ವಿಪರ್ಯಾಸ .
೨೦೧೪ ರ ನಂತರ ನಡೆದ ಚುನಾವಣೆಗಳ ಫಲಿತಾಂಶ ಗಮನಿಸಿದರೆ ಕಾಂಗ್ರೆಸ್ ಗೆ ತೃಪ್ತಿದಾಯಕ ಫಲಿತಾಂಶ ಬಂದಿರುವುದೆಂದರೆ ಪಂಜಾಬ್ ನಲ್ಲಿ ಮಾತ್ರ . ಉಳಿದಂತೆ ಮಹಾರಾಷ್ಟ್ರ , ಉತ್ತರಕಾಂಡ , ಅಸ್ಸಾಂ , ಗೋವಾ , ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಹೇಳ ಹೆಸರಿಲ್ಲದಂತೆ ಕಾಂಗ್ರೆಸ್ ನಿರ್ನಾಮವಾಗಿದೆ. ಇನ್ನು ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರು ಪಕ್ಷದ ನಾಯಕತ್ವ ವಿರೋಧಿಸಿ ಪಕ್ಷಾಂತರ ಮಾಡುತ್ತಿದ್ದಾರೆ. ನಾಯಕತ್ವ ವಿರೋಧಿಸುವುದಕ್ಕೂ ಮೇಲೂ ಅವರಿಗೆ ಪಕ್ಷದ ಅಳಿವು ಉಳಿವುಗಳ ಗೊಂದಲವಿದೆ. ಇನ್ನು ಪ್ರತಿ ಪಕ್ಷಗಳೂ ಕೂಡ ಕಾಂಗ್ರೆಸ್ನೊಂದಿಗೆ ಸಖ್ಯ ಬೆಳೆಸಲು ಹಿಂದೇಟು ಹಾಕುತ್ತಿವೆ. ಇತ್ತೀಚಿನ ಬೆಳವಣಿಗೆಯಲ್ಲಿ ಬಿಹಾರದ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಮತ್ತು ಜೆ ಡಿ ಯು ಸಖ್ಯ ತೊರೆದು ಬಿ ಜೆ ಪಿ ಯೊಂದಿಗೆ ಕೈ ಜೋಡಿಸಿರುವುದು ಇದಕ್ಕೆ ಉತ್ತಮ ಉದಾಹರಣೆ. ಇನ್ನು ಎನ್ ಸಿ ಪಿ ಯೂ ಕೂಡ ನಿನ್ನೆಯ ಪ್ರತಿ ಪಕ್ಷಗಳ ಸಭಯಲ್ಲಿ ಪಾಲ್ಗೊಳ್ಳದೆ ಕೈ ಕೊಟ್ಟಿರೋದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಉಳಿದಂತೆ ಸಿ ಪಿ ಎಂ ಸ್ವತಂತ್ರ ಸ್ಪರ್ಧೆಯ ಮಾತುಗಳನ್ನಾಡುತ್ತಿದೆ. ಸಮಜಾವಾದಿ ಪಕ್ಷವು ಎರಡು ಹೋಳಾಗಿದೆ , ಮಾಯಾವತಿ ನೇತೃತ್ವದ ಬಿ ಎಸ್ ಪಿ ಉತ್ತರ ಪ್ರದೇಶದಲ್ಲಿ ಆಸ್ತಿತ್ವಕ್ಕಾಗಿ ಪರದಾಡುತ್ತಿದೆ . ಜೊತೆಗಿರುವುದು ಕಾಂಗ್ರೆಸ್ನಿಂದ ಮುನಿಸಿ ದೂರವಾಗಿ ಸ್ವತಂತ್ರ ಪಕ್ಷ ಕಟ್ಟಿ ಅಧಿಕಾರ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಮಾತ್ರ . ಈಗಾಗಲೇ ಹಲವರೂ ಪ್ರತಿ ಪಕ್ಷಗಳ ನಾಯಕರು ಹೇಳಿರುವಂತೆ ೨೦೧೯ ಕ್ಕೆ ಬಿ ಜೆ ಪಿ ಎದುರು ಗೆಲ್ಲುವುದಕ್ಕೂ ಮೊದಲು ಮೋದಿಜಿಯವರನ್ನು ಎದುರಿಸಲು ಸಮರ್ಥ ಹಾಗೂ ಪರ್ಯಾಯ ನಾಯಕನೊಬ್ಬನನ್ನು ಹುಡುಕಬೇಕು . ಆಗ ಮಾತ್ರ ದೇಶದಲ್ಲಿ ಕಾಂಗ್ರೆಸ್ ನೆಲೆ ಕಂಡು ಕೊಳ್ಳಬಹುದು . ೨೦೧೯ ರ ಪ್ರಸವಕ್ಕೆ ವೇದನೆ ಪಡುತ್ತಿರುವ ಕಾಂಗ್ರೆಸ್ ಅನ್ನು ಕೈ ಹಿಡಿದು ನಡೆಸುವರಾರು ಹಾಗೂ ಜೊತೆ ನಿಲ್ಲುವವರ್ಯಾರು ಎಂದು ಕಾದು ನೋಡಬೇಕಾಗಿದೆ .
ರಾಜೇಶ್ ಶೆಟ್ಟಿ